ಶುಕ್ರವಾರ, ನವೆಂಬರ್ 9, 2012

LOVE @ 1st SIGHT


ಕಣ್ಣಿನ ರೆಪ್ಪೆಯ ಬಡಿದು,
ಪಾರಿವಾಳದ ರೆಕ್ಕೆಯಂತೆ,
ಕಾಳಜಿ ಕಂಗಳ ಹೊಳಪು ಮೆರೆದಿತ್ತು|

ಕಿವಿಯ ಹಿಂಬದಿ ತೆರಳುತ,
ಎರಡೆಳೆಯ ಕೂದಲು,
ಅಂದದ ನಿಘೂಡವ ಸರಿಸಿತ್ತು|

ಮೂಗುತಿಯದು ಮೂಗಿನ ಕೊಕ್ಕಲಿ,
ಬಿನ್ನಾಣಗಿತ್ತಿಯ ಹೊಕ್ಕು,
ಬಿಂಕದ ಬಿಂಬವ ಬೀರುತ್ತಿತ್ತು|

ಮೇಲ್ದುಟಿ ಸಂಕೋಚ ಸರಿದಂತೆ,
ಕೆಳದುಟಿಯ ಹಂಬಲ ತೆರೆಯಲು,
ಆ ಮೊಗದಲ್ಲೊಂದು ತಾವರೆ ಅರಳಿತ್ತು|

ಭಾವೋದ್ವೇಗದ ಮೊದಲ ನೋಟದಿ,
ಸುರುಳಿ ಸುತ್ತುತ ನನ್ನ ಮನವು,
ಪ್ರೀತಿಯ ಅರ್ಥ ತಿಳಿಸಿತ್ತು|

ಗುರುವಾರ, ನವೆಂಬರ್ 1, 2012

ರಾಜೋತ್ಸವ ರಾಜಧಾನೀಲಿ


ಬಂಡಿ ಸಾಗುತಿದೆ, ರೈಲು ಬಂಡೀ ಸಾಗುತಿದೇ,

ಎಲ್ಲೋ ದೂರದಲೀ ನನ್ನ ಬೆಂಗ್ಳೂರ್ ಕಾಯುತಿದೇ
ಹೊತ್ತಿಲ್ಲ ಸುಸ್ತಿಲ್ಲ, ದಣಿವೂ ಇಲ್ಲಾ,
ಈ ರೈಲಿಗ್ ಮಧ್ಯದಲ್ ಸ್ಟಾಪೇ ಇಲ್ಲಾ
ಏನೈತೆ ಬೆಂಗ್ಳೂರ್ನಾಗ್ ಕೇಳ್ದವರ್ಯಾರು?,
ಒಂದ್ಸಾರಿ ಬಂದ್ ನೋಡಿ ಬೆಂಗ್ಳೂರ್ ಜೋರು.

ಬಂಡಿ ಸಾಗುತಿದೆ, ರೈಲು ಬಂಡೀ ಸಾಗುತಿದೇ,
ಎಲ್ಲೋ ದೂರದಲೀ ನನ್ನ ಬೆಂಗ್ಳೂರ್ ಕಾಯುತಿದೇ

ಬೇಸಿಗೆ ದಗೆಯಿಲ್ಲ ಬಾಳಲು,
ಛಳಿಯು ತಾರ್ಕಕ್ಕೆ ಹೋಗದು, ನಮ್ ಬೆಂಗಳೂರ್
ಎಲ್ಲರೂ ಸೇರುವ, ವಗ್ಗೂಡಿ ಬಾಳುವ,
ಅವಕಾಶ ಉಂಟು ನಮ್ಮ ನಾಡಲಿ.

ದೇಶವ ಬೆಳಗುವ ಸಂಸ್ಕೃತಿ ಧ್ವಂದಿ,
ಇಕ್ಕಟ್ಟಲ್ ಕೈ ಕಟ್ಟಿ ನಡಿಯೋಸ್ಟ್ ಮಂದಿ,
ಹೆರದಿದ್ರೂ ಹೊರುತಿರುವ ತಾಯೀ ಮಮತೆ,
ನಾವಾಡೊ ನಾಣ್ಣುಡಿಯೆ ಕನ್ನಡ ಮಾತೆ.

ಬಂಡಿ ಸಾಗುತಿದೆ, ರೈಲು ಬಂಡೀ ಸಾಗುತಿದೇ,
ಇನ್ನೇನ್ ಹತ್ರದಲ್ಲೇ ನನ್ನ ಬೆಂಗ್ಳೂರ್ ಬರುತಲಿದೆ

ಶನಿವಾರ, ಸೆಪ್ಟೆಂಬರ್ 1, 2012

"ಆಫ್ಟರ್ 8 ಇಯರ್ಸ್" ಬಿಡುಗಡೆ

ಈ ಕೆಳಗಿನ ಚಿಕ್ಕ ಲಿಂಕ್ ಪೋಸ್ಟ್ ಮಾಡೋಕೆ ಇಷ್ಟು ದಿನ ಬ್ಲಾಗ್ ಬರ್ಯೋಕೂ ಆಗ್ಲಿಲ್ಲ... ಕಥೆ, ನಿರ್ದೇಶನ ಹಾಗೂ ನಟನೆಯಲ್ಲಿ ನನ್ನದೂ ಪಾತ್ರವಿರುವ ಈ ಕಿರುಚಿತ್ರ ನಮಗಾಗಿ, ನಿಮಗಾಗಿ :) ಈ ಪ್ರಪ್ರಥಮ ಪ್ರಯತ್ನವನ್ನ ಪ್ರೋತ್ಸಾಹಿಸೋಕೆ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ :)

ಭಾನುವಾರ, ಜುಲೈ 22, 2012

ಕೂಸಳ್ಳಿ Falls-ಪ್ರಕೃತಿ ಮಡಿಲಲ್ಲಿ

       ಗಂಡು ಮಕ್ಳಿಗೆ ಆಗಾಗ love failure ಆಗೋದು ಸಾಮಾನ್ಯ. ಮಾತುಕಥೆ ಆಗ್ಲಿಲ್ಲಾಂದ್ರೂ ಮನಸಲ್ಲೇ ಸಾವಿರ ಅಂದ್ಕೊಂಡು ಕೊರಗ್ತಾವೆ ಅಂತ ಹೇಳಿದ್ರೆ ಯಾವುದೇ ಪ್ರಮೇಯದ ಮುಖಾಂತರ ತಪ್ಪೆಂದು ವಾದಿಸೋಕೆ ಸತ್ಯ ಸಾಕ್ಷಿ ಇಲ್ಲ.

ಕೊರಗಿ ಕೊರಗಿ ಹೃದಯಾನ ಹಿಂಡಿ ಹಿಪ್ಪೆ ಮಾಡಿ, ಮನಸ್ಸನ್ ಮುದಡ್ಸ್ಕೊಂಡು, ಮೂತೀನ ಸೊರಗಿಸ್ಕೊಂಡು, ಭ್ರಾಂತಿನ ಮೂಡಿಸ್ಕೊಂಡು, ಜೀವನದ ರಸಕ್ಷಣಗಳನ್ನು ಬಂಜರಾಗಿಸಿಕೊಂಡಿದ್ದ ನಾನು ಅವಳ ನೆನಪುಗಳಿಂದ ಸ್ವಲ್ಪ ದೂರ ಸರಿಯೋಣ ಅಂತ ಪ್ರಕೃತಿ ತಾಣಕ್ಕೆ ಹೋಗಿದ್ದೆ.



         ಕುಂದಾಪುರ ತಾಲ್ಲೂಕಿನ ಬೈಂದೂರಿನ ಹತ್ತಿರ, ಪಶ್ಚಿಮ ಘಟ್ಟದ ಕಾಡುಪ್ರದೇಶದ ಮಧ್ಯೆ ಒಂದು ಜಲಪಾತ ಇದೆ. ಕೂಸಳ್ಳಿ falls ಅಂತ ಅದ್ರ ಹೆಸ್ರು. ಕಾಡ ಹಾದಿಯಲ್ಲಿ ಹೋಗ್ತಾ ಇದ್ರೆ ಹಿಂದೆಂದೂ ಇಲ್ಲಿಗೆ ಜನಾನೇ ಬಂದಿಲ್ಲ ಅನ್ನೋಷ್ಟು ದಟ್ಟವಾಗಿಲ್ಲ. ನಮ್ಮಂಥ ಹುಡುಗ್ರು ಜೊತೆಗಿದ್ರೆ, ಸುಮಾರಿಗ್ ವಯಸ್ಸಾದವ್ರೂ ಬರಬಹುದು. ಕಾಡಿನ ಎತ್ತರ ಏರಿ; ಇಳಿಯನ್ನು ಜಾರಿ, ಜಲಪಾತದ ತಪ್ಪಲಿಗೆ ಸೇರಿದೆ. ಮುಖ ತೊಳೆದು ಅಮೃತದ ಆಸರೆ ಸ್ವೀಕರಿಸಿದವನಿಗೆ ಎಲ್ಲಿಲ್ಲದ ಹರುಷ, ಶಕ್ತಿ. ಹತ್ತಿ ನಡೆದೆ ಶೈಲಜಾಳ(ಶೈಲಜ = ಶೈಲ+ಜ = ನದಿ) ಮೂಲ ಹುಡುಕಿ. ೭ ಹಂತದಲ್ಲಿ ಧುಮುಕೋ ಜಲಪಾತದ ೫ ಹಂತಗಳನ್ನು ಮಾತ್ರ ನಾನು ಕ್ರಮಿಸಿದ್ದು. ೫ ನೇ ಹಂತದಲ್ಲಿ ನೀರಿನ ಧುಮುಕಿನಿಂದ ಬಂಡೆ ಮಧ್ಯ ಉಂಟಾದ ಕೊಳದಲ್ಲಿ ಈಜಿ, ಬಂಡೆ ಮೇಲೆ ಬಂದು, ಸೂರ್ಯನ ಬಿಸಿಲಿಗೆ ಮಯ್ಯೊಡ್ಡಿ ಮಲಗಿದೆ.    ಆಯಾಸ ತಣಿತಿದ್ದಂಗೇ, ಜಲಪಾತದ ಸದ್ದು ಹೆಚ್ಚಾಗತೊಡಗಿತು. ಆ ನೀರಿನ ಸಣ್ಣ ಸಣ್ಣ ಝರಿಯು ನನ್ನ ಮುಖದ ಮೇಲೆ ಕೂತು ಪುಳಕಗೊಳಿಸುತ್ತಿದ್ದವು. ಆವಿಯಾಗುತ್ತಿದ್ದ ನೀರಿನ ಸಿಬಿರಿನ ಮುಖಾಂತರ ಹಾದುಹೊಗೋ ಸೂರ್ಯನ ಕಿರಣಗಳು ನನ್ನ ರೋಮಾಂಚನಗೊಳಿಸುತ್ತಿದ್ದವು. ಹರ್ಷದಿಂದ ಹಿಗ್ಗಿದ ನನ್ನ ಹೃದಯದಲ್ಲಿ ಆ ಕ್ಷಣ ಪರಮಾತ್ಮ ನೆಲೆಸಿದ್ದ; ನನ್ನ ನೋವು, ಲೌಕಿಕ ಒಪ್ಪಂದಗಳನ್ನು ಮರೆಸಿದ್ದ; ಸ್ವರ್ಗ ಸುಖಾನ ಭೂಮಿ ಮೇಲೆ ಆಹ್ವಾನಿಸಿದ್ದ.



     
             ನಾನಲ್ಲಿ ಎಕಾಂಗಿಯಾಗಿರಲಿಲ್ಲ. ನನ್ನೊಂದಿಗೆ ಪ್ರಕೃತಿ ದೇವತೆಯಿದ್ದಳು. ಅವಳ ಮಡಿಲಲ್ಲಿ ನಾ ಮಲಗಿದ್ದೆ. ಆ ಹಸಿರಿನ ನಡುವೆ ನನಗಾಗಲಿಲ್ಲ ಹಸಿವು. ತಾಯಿಯ ಆರೈಕೆ ನನಗಲ್ಲಿ ಪ್ರಾಪ್ತಿಯಾಗಿತ್ತು. ಪಂಚೇಂದ್ರಿಯಗಳು ನಲಿದಾದುತ್ತಿದ್ರೆ, ನನ್ನೆದೆಯ ಪರಮಾತ್ಮ ಹಾಡು ಶುರು ಮಾಡಿದ್ದ.
"ಮರೆತೆ ನಾನು ನಿನ್ನ,
 ಅರಿತೆ ಪ್ರಕೃತಿಯನ್ನ.... "
ಮನಸ್ಸಿಗೆ ಮುದ ಬರ್ತಿದೆ, ದೇಹ ಒಂದು ಹದಕ್ ಬರ್ತಿದೆ.
 
       ಜೀವನದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಸುಖಸಂತೋಷಗಳು ನಮ್ಮನ್ನ ಹುಡುಕ್ಕೊಂಡು ಬರ್ತವೆ. ನಾವು ಸಮಾಧಾನದಿಂದ ಕಾಯ್ಬೇಕಷ್ಟೇ... ಪ್ರೀತಿ ಬರೀ ಹುಡ್ಗೀರ್ ಮೇಲೇ ಆಗಬೇಕಾ? ಇಷ್ಟೊಂದು ಸೌಂದರ್ಯರಾಶಿಗೆ ಒಡತಿಯಾದ ತಾಯಿಯಲ್ಲಿ ಪ್ರೀತಿ, ಆರೈಕೆ ಕಾಣಿಸೋಡಿಲ್ವೆ? ಇಂಥ ಚಿಕ್ಕ ಚಿಕ್ಕ ಪ್ರಶ್ನೆಗಳು ನೀರಿನ ಗುಳ್ಳೆಗಳಂತೆ ನನ್ನ ತಿಳಿ ಮನಸ್ಸಿನ ಮೇಲ್ಮೈಯಲ್ಲಿ ಹುಟ್ಟಿ ಸಾಯುತ್ತಿದ್ದವು. ನಿಷ್ಕಲ್ಮಷ ನೀರಿನ ಝರಿಯ ಚುಂಬನ ನನಗೆ ಮೋಡಿ ಮಾಡಿತ್ತು. ನನ್ನ ಕಣ್ಗಳನ್ನ ಅರಳಿಸಿತ್ತು.



           ನಿಮಗೇನಾದ್ರು ನಿಮ್ಮ ಪಂಚೆಂದ್ರಿಯಾನ ಶುದ್ಧೀಕರಿಸಿಕೊಂಡು, ನಿಮ್ಮೊಳಗಿನ ಪರಮಾತ್ಮನ ಭರತನಾಟ್ಯ ನೋಡೋ ಆಸೆ ಆದ್ರೆ ಕೂಸಳ್ಳಿ falls ಗೆ ಜರೂರ್ ಹೋಗಿ. ೭ ಹಂತಕ್ಕೂ ಮೀರಿ ಮೇಲೇರಿದರೆ, ಅಲ್ಲಿ ಇನ್ನೆರೆಡು ಹಂತದ ಜಲಪಾತ ಇದ್ಯಂತೆ. ಅದರ ಹೆಸ್ರು ಗೂದನಗುಂಡಿ falls ಅಂತೆ. ನಾನು ನೋಡ್ಲಿಲ್ಲ. ಅಲ್ಲಿಗೆ ಬೇರೆ ದಾರಿ ಹಿಡಿದು, ಸೀದ ಜಲಪಾತದ ಮೇಲೆ ಹೋಗಿ ಸೇರಿದ ನನ್ನಣ್ಣ ರಾಕೇಶ್ ಹೇಳಿದ್ದು. ಹ್ಞಾಂ! ನಿಮ್ಮ ಮಾಹಿತಿಗೆ ನಾನು ಸುರಕ್ಷಿತವಾಗಿಯೇ ವಾಪಸ್ ಇಳಿದು, ಮನೆಗೆ ಬಂದು, ಹೊಸ ಜೀವನದ ಶೈಲಿಯನ್ನು ರೂಪಿಸಿಕೊಂಡು ಈ ಲೇಖನಾನ ಬರ್ದಿದೀನಿ.

Photo Owner : ರಾಕೇಶ್  ಹೊಳ್ಳ .










    

ಬುಧವಾರ, ಜುಲೈ 18, 2012

ಆಫ್ಟರ್ 8 ಇಯರ್ಸ್


ಸಮಸ್ಯೆಯ ಸೂತ್ರ ಬಿಡಿಸೋಕೆ ಹೊಸ ಮಾಧ್ಯಮದೊಂದಿಗೆ, ನಿಮ್ಮೆದುರಿಗೆ.


ವೈಟ್ ನೋಯ್ಸ್ ಅರ್ಪಿಸುವ ಕಿರುಚಿತ್ರ ಆಫ್ಟರ್ 8 ಇಯರ್ಸ್... 


ಅತಿ ಶೀಘ್ರದಲ್ಲಿ... 





ಪೋಸ್ಟರ್ ಡಿಸೈನ್: ಕಿರಣ್ ಬಸವರಾಜ್.

ಅರ್ಥ ಬಿಂಬಿಸೋ ಸಾಲು ಬರೆದು ಕೊಟ್ಟವರು: ಕಿರಣ್ ಭಟ್

ಬುಧವಾರ, ಜೂನ್ 13, 2012

ಕನ್ನಡದ ಚಿಟ್ಟೆ

       ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕುದ್ರೆಮುಖದಲ್ಲಿ ನಡಿಸ್ತಿರೋ ೨೭ನೇ ಕನ್ನಡ ಜನಪ್ರಿಯ ವಿಜ್ಞಾನ ಲೇಖಕರ ತರಬೇತಿ ಶಿಬಿರದಲ್ಲಿ ಭಾಗವಹಿಸೋಕಂತ k.s.r.t.c ಬಸ್ಸು ಹತ್ತಿ ಕೂತು, ಗೆಳೆಯ ಕಿರಣ್ ಗೆ ಫೋನ್ ಮಾಡಿ ಹರಟೆ ಹೊಡಿತಾ ಕೂತ ನನ್ನ  ಪಕ್ಕದ ಬಸ್ ಮೇಲೆ "ಸುವರ್ಣ ಕರ್ನಾಟಕ" ಎಂದು ಬರೆದ ಕನ್ನಡದ ಲಿಪಿ ಕಣ್ಣಿಗೆ ಕುಕ್ಕುತ್ತಿತ್ತು. 'ವ' ಮತ್ತು ಅರ್ಕ ವತ್ತಿನ ನಡುವೆ ಇರೋ 'ಣ' ಹಾಗೂ ಅರ್ಕ ವತ್ತು, 'ಕ' ನಡುವಿನ 'ಟ'  ಆ ಕುಂಕುಮ ವರ್ಣದಲ್ಲಿ ನನಗೆ ಚಿಟ್ಟೆಗಳಂತೆ ಕಂಗೊಳಿಸಿದರೂ, ಹಾರದೇ ಅಲ್ಲೇ ಕೂತಿದ್ದವು. ಚಿಟ್ಟೆ ಎಷ್ಟೊತ್ತಿಗೆ ಹಾರೋಗುತ್ತೆ ಅಂತ ಹೇಳೋಕಾಗಲ್ಲ! ನನಗೆ ಆ ಘಳಿಗೆಯ ಮೇಲಿದ್ದ ಆತುರ, ಅಗತ್ಯವನ್ನು ಕಿರಣ್ ಗೆ ತಿಳಿಸಿ, ಗಡಿಬಿಡಿಯಲ್ಲಿ ಫೋನ್ ಇಟ್ಟು, ಪೆನ್ನು ಪೇಪರ್ ತೆಗೆದು "ಣ ಹಾಗು ಟ ದಲ್ಲಿನ ಚಿಟ್ಟೆ" ಅಂತ ಬರೆದೆ. ಅರ್ರೆ!!! "ಚಿಟ್ಟೆ" ಒಳಗೇ ೩ ಚಿಟ್ಟೆ ಕಾಣಿಸ್ಬೇಕಾ ನಂಗೆ.!.. ನಂಗೆ ಕಾಣ್ಸಿದ್ದನ್ನ ನಿಮಗೂ ಕಾಣ್ಸುವಂತೆ ಈ ಚಿತ್ರದಲ್ಲಿ ಬಿಡಿಸಿದ್ದೀನಿ... ನೋಡಿರಿ, ನಮ್ಮ ಲಿಪಿಯ ಸೌಂದರ್ಯವನ್ನ ಸವಿಯಿರಿ, ಬೇರೆಯವ್ರ ಅನುಭವಕ್ಕೂ ಈ ರುಚಿಯನ್ನೂ ಹರಡಿ. ಹಾಂ. ಚಿಕ್ಕ ಮಕ್ಳಿಗೆ ಪಾಠ ಹೇಳೋವ್ರು ಇದ್ರೆ, ನಮ್ಮ ಲಿಪಿಯಲ್ಲಿ ಅಡಗಿರೋ ಗಮ್ಮತ್ ನ ಪರಿಚಯಿಸೋದು ಮರಿಬೇಡಿ. ನಾನೂ ಮರಿಯದೇ ಪರಿಚಯಿಸೋ ಪ್ರಯತ್ನ ಮಾಡ್ತಿರ್ತೀನಿ :) 

       ಕನ್ನಡದ ಕಾಮಧೇನು, ಕನ್ನಡದ ಕಲ್ಪವೃಕ್ಷವ ಕಂಡಿದ್ದೀರಿ ನೀವು... ಕಂಡಿರೇ ಕನ್ನಡದ ಚಿಟ್ಟೆಯ!


     
ಕನ್ನಡದ ಚಿಟ್ಟೆ...
ಬೇಕಿಲ್ಲ ಇದಕೆ ರಂಗಿನ ಬಟ್ಟೆ.
ಅಪ್ಪ ಅಮ್ಮ ಮಗು ಚಿಟ್ಟೆ...
ಇದು ಕನ್ನಡದ ಚಿಟ್ಟೆ. :)

ಭಾನುವಾರ, ಜೂನ್ 10, 2012

ಗುಪ್ತೋಷ್ಣ


                ಕೆಲವರು ಹೇಳುದುಂಟು ನೋಡಿ, "ಹಣ ಬಂದ ಮೇಲೆ ಅವ ಸಂಪೂರ್ಣ ಬದಲಾಗಿ ಹೋದ ಮರ್ರೆ". ಹಣ ಬಂದಾಗ ಮಾತ್ರ ಅಲ್ಲ,ಇದ್ದಕ್ಕಿದ್ದಂಗೆ ಎಲ್ಲಾ ಕಳೆದುಕೊಂಡಾಗ್ಲೂ ಮನುಷ್ಯನ ಸ್ವಭಾವದಲ್ಲಿನ ಬದಲಾವಣೆ ಪ್ರಕೃತಿ ನಿಯಮ. ಪ್ರಕೃತಿ ಮನುಷ್ಯನಿಗಾಗಲಿ, ಯಾವುದೇ ಪದಾರ್ಥಕ್ಕಾಗಲಿ, ಭೇದ ಭಾವ ತೋರಲ್ಲ.ಪದಾರ್ಥಗಳೂ ಸಹ ತನ್ನ ಸ್ವರೂಪವನ್ನು ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ಬದಲಾಯಿಸಬೇಕಂದ್ರೆ, ಒಂದು ಕನಿಷ್ಠ ಪ್ರಮಾಣದ ಶಕ್ತಿಯನ್ನು ತನ್ನೊಳಗೆ ಸೆಳೆದುಕೊಂಡಿರಬೇಕು ಇಲ್ಲ ಹೊರಹಾಕಿರಬೇಕು. ಈ ಶಕ್ತಿಗೆನೇ ಗುಪ್ತೋಷ್ಣ(latent heat) ಎನ್ನೋದು. ಉದಾಹರಣೆಗೆ ಪದಾರ್ಥವು ಜಾಸ್ತಿ ಸಾಂಧ್ರತೆಯ ಘನ ಸ್ಥಿತಿಯಿಂದ ಕಡಿಮೆ ಸಾಂಧ್ರತೆಯ ದ್ರವ ಸ್ಥಿತಿಗೆ ಬದಲಾಗುವಾಗ, ಅಣುಗಳಿಗೆ ಹರಡಿಕೊಳ್ಳಲು ವಿಶಾಲವಾದ ಜಾಗ ಸಿಕ್ಕಂತಾಗುತ್ತೆ. ಈ ಸ್ವಾತಂತ್ರ್ಯಕ್ಕೆ ಬೇಕಾಗುವಷ್ಟು ಅಗತ್ಯ ಶಕ್ತಿಯನ್ನು ಅಣುಗಳು ಹೊರಗಿನಿಂದ ಹೀರಿಕೊಳ್ಳುತ್ತವೆ. ಹಾಗೇ ಅನಿಲದಿಂದ ದ್ರವ ಅಥವಾ ಘನ ಆಗ್ಬೇಕಂದ್ರೆ, ಅದರಲ್ಲಿರೋ ಶಕ್ತಿಯನ್ನು ಬಿಟ್ಕೊಟ್ಟು, ಅಣುಗಳು ಸ್ವಾತಂತ್ರ್ಯವನ್ನು ಕಳೆದುಕೊಂಡು ಒಂದರ ಹತ್ತಿರಕ್ಕಿನ್ನೊಂದು ಬರ್ತವೆ. ಇದು  ಗುಪ್ತೋಷ್ಣದ ವ್ಯಾಖ್ಯಾನ ಅಲ್ಲ. ವ್ಯಾಖ್ಯಾನಗಳನ್ನ ಎಗ್ಸಾಮ್ಸ್ ಗಳಲ್ಲಿ ಬರಬರೆದೇ ಸುಸ್ತಾಗ್ಬಿಟ್ಟಿರ್ತೀವಿ. ಹ್ಹ! ಹ್ಹ! ನಾವು ಈಗ  ಗುಪ್ತೋಷ್ಣ ಎಂಬ ಪದಾನ ಒಪ್ಕೊಂಡು ಅದರ ಗುಣಲಕ್ಷಣಗಳನ್ನ ತಿಳಿಯೋಕೆ ಪ್ರಯತ್ನಿಸೋಣ. ಈ ಪ್ರಕ್ರಿಯೆಯಲ್ಲಿ ಹುಟ್ಟೋ ಅದರ ವ್ಯಾಖ್ಯಾನವನ್ನು ಪಠ್ಯಪುಸ್ತಕದಲ್ಲಿ ಕಂಡ ಸವಿನೆನಪುಗಳಿದ್ದಲ್ಲಿ ಒಮ್ಮೆಶಪಿಸೋಣ .... :)

            ಈಗ ನಾವು ೨ ಲೋಟ ನೀರನ್ನ ಪಾತ್ರದಲ್ಲಿ ಹಾಕಿ ಸ್ಟವ್ ಮೇಲೆ ಕಾಯ್ಸೋಕಿಡೋಣ.ಸ್ಟವ್ ಹಚ್ಚೋ ಮುನ್ನ ಅದರ ಉಷ್ಣತೆ ಸುತ್ತಲಿನ ವಾತಾವರಣದ ಉಷ್ನತೆಯೇ ಆಗಿರುತ್ತೆ. ಅಡಿಬೆಂಕಿ ರೂಪದಲ್ಲಿ ಸ್ಟವ್ ಕೊಡ್ತಿರೋ ಶಕ್ತಿಯನ್ನ ಬಳಸಿಕೊಂಡು ನೀರಿನ ಉಷ್ಣತೆ ಹೆಚ್ಚುತ್ತಾ ಹೋಗುತ್ತೆ. ಯಾವಾಗ ನೀರಿನ ಉಷ್ಣತೆ ೧೦೦ ಸೆಲ್ಸಿಯಸ್ ತಲುಪುತ್ತೋ, ಅಲ್ಲಿಗೆ ಅದರ ಉಷ್ಣಾಂಶದ ಏರಿಕೆ ನಿಂತು ಹೋಗುತ್ತೆ. ಹಾಗಾದರೆ ಇನ್ನೂ ಸ್ಟವ್ ಕೊಡ್ತಿರೋ ಶಕ್ತಿ ಎಲ್ಲಿಗೆ ಹೋಗ್ತಾ ಇದೆ? ಈ ಶಕ್ತಿ ಎಲ್ಲಿ ಅಡಗಿಕೊಂಡಿದೆ ಎಂಬ ಪ್ರಶ್ನಾತ್ಮಕ ಚಿಹ್ನೆಯೊಂದಿಗೇ  ಗುಪ್ತೋಷ್ಣ ಎಂಬ ಹೆಸರಿನ ನಾಮಕರಣ ನಡೆದುಹೋಗುತ್ತೆ....

೧೦೦ ಡಿಗ್ರೀ ಸೆಲ್ಸಿಯಸ್ ತಲುಪಿದ ನಂತರವೂ ಸ್ಟವ್ ನೀಡುತ್ತಿರೋ ಶಕ್ತಿಯು ನೀರಿನ ಅಣುಗಳ ನಡುವಿನ ಕೊಂಡಿ(bond) ಯನ್ನು ಸಡಿಲಗೊಲಿಸುತ್ತದೆ. ನೀರು ಅನಿಲ ಸ್ಥಿತಿಯ ನೀರಾವಿಯಾಗಿ ಪರಿವರ್ತನೆಗೊಳ್ಳುತ್ತದೆ. ಅಷ್ಟೇ ಅಲ್ಲದೆ, ಅದೇ ಸ್ಟವ್ ನ  ಶಾಖವನ್ನೂ ಬಳಸಿಕೊಂಡು, ನೀರಿನ ಮೇಲ್ಮೈ ಒತ್ತಡವನ್ನು ಮೀರಿ ವಾತಾವರಣವನ್ನು ಸೇರುತ್ತೆ... ಸಾಕು ನೀರು ಕುದಿತಿದೆ. ಸ್ಟವ್ ಆಫ್ ಮಾಡುವ. ಅಲ್ಲಿಗೆ ೧ ತೂಕದಷ್ಟು ನೀರು ೧೦೦ ಡಿಗ್ರೀ ತಲುಪಿದ ನಂತರ ಅದರ ಉಷ್ಣತೆ ಬದಲಾಯಿಸದೆ ಕುದ್ದು ಕುದ್ದು ಪೂರ್ತಿಯಾಗಿ ಆವಿಯಾಗೋಕೆ ಬೇಕಾಗಿರೋ ಶಾಖಕ್ಕೆ(ಶಕ್ತಿಗೆ)  ಗುಪ್ತೋಷ್ಣ ಎಂದು ಕರೀಬಹುದು.

ಸ್ಟವ್ ಮೇಲೆ ಇಡೋ ಬದ್ಲು ಫ್ರಿಡ್ಜ್ ನಲ್ಲಿ ಇಟ್ಟಿದ್ದಿದ್ರೆ, ಅದರ ಉಷ್ಣಾಂಶ ಕಡಿಮೆಯಾಗುತ್ತಾ ಸೊನ್ನೆ ಡಿಗ್ರೀ ತಲುಪುತ್ತಿತ್ತು. ಈ ಕ್ರಿಯೆಯಲ್ಲಿ ನೀರು ಬಿಟ್ಟುಕೊಡೊ ಶಕ್ತಿಯನ್ನು ಹೊರಗೆ ಹಾಕೋದು ಫ್ರಿಡ್ಜ್ ನ ಆದ್ಯ ಕರ್ತವ್ಯ.ಸೊನ್ನೆ ಸೆಲ್ಸಿಯಸ್ ನಲ್ಲಿ ನೀರು ಮಂಜುಗಡ್ಡೆ ಆಗುತ್ತಾ  ಗುಪ್ತೋಷ್ಣವನ್ನೂ ಬಿಟ್ಟುಕೊಡುತ್ತೆ. ಈ  ಗುಪ್ತೋಷ್ಣವನ್ನೂ ಫ್ರಿಡ್ಜ್ ಹೊರ ಹಾಕಿದ್ರೆ ನೀರು ಮಂಜುಗಡ್ಡೆ ಆಗುತ್ತೆ. ಇಲ್ಲಾಂದ್ರೆ ತಣ್ಣಗಿನ ಪಾನಿ ಮಾತ್ರ ಸಿಗುತ್ತೆ. ಪ್ರಾಯೋಗಿಕ ವಿವರಣೆಗೆ ಈ ವೀಡಿಯೋ ನೋಡಿ.

ನೀರಾವಿಯು ಮೋಡಗಳ ಹುಟ್ಟಿಗೆ ಬೇಕಾಗೋ ಮೂಲಭೂತ. ಸೂರ್ಯನ ಬಿಸಿಲಿನ ಶಾಖಕ್ಕೆ ಹೊಳೆ, ಸಮುದ್ರದ ಮೇಲ್ಮೈ ನೀರಿನ ಉಷ್ಣಾಂಶ ಏರಿಕೆ ಪೂರ್ಣಗೊಂಡು ಗುಪ್ತೋಷ್ಣವನ್ನು ಹೀರಿಕೊಂಡು ನೀರಾವಿಯಾಗಿ, ಗಾಳಿಯನ್ನು ತೇವಗೊಳಿಸುತ್ತದೆ. ಈ ನೀರಾವಿ ವಾತಾವರಣದಲ್ಲಿ ಮೇಲೇರಿ, ಕಡಿಮೆ ಉಷ್ಣಾಂಶದ ಜಾಗವನ್ನು ತಲುಪಿ ಅಲ್ಲಿ ತಾ ಹೀರಿಕೊಂಡಿದ್ದ  ಗುಪ್ತೋಷ್ಣವನ್ನು ಬಿಟ್ಟುಕೊಟ್ಟು, ಮೋಡಗಳಾಗಿ ಘನೀಕರಿಸುತ್ತದೆ. ಬಿಡುಗಡೆಯಾದ  ಗುಪ್ತೋಷ್ಣ ಸುತ್ತಲಿನ ಗಾಳಿಯನ್ನು ಬೆಚ್ಚಗಾಗಿಸುತ್ತದೆ. ಬೆಚ್ಚಗಿನ ಗಾಳಿಯಲ್ಲಿ ಅಣುಗಳು ಜಾಸ್ತಿ ಫ್ರೀ ಆಗಿರೋದ್ರಿಂದ ಅದರ ಸಾಂದ್ರತೆ ಕಡಿಮೆ. ಗಾಳಿಯ ಸಾಂದ್ರತೆಯಲ್ಲಿ ವ್ಯತ್ಯಾಸ ಸೃಷ್ಟಿಗೊಂಡುವಾತಾವರಣದಲ್ಲಿ ಏರುಪೇರನ್ನುಂಟುಮಾಡುತ್ತದೆ. ಈ ಅಸ್ಥಿರತೆಯನ್ನು ತಂತಾನೇ ನಿವಾರಿಸಿಕೊಳ್ಳಲು, ಬೆಚ್ಚಗಿನ ಗಾಳಿ ತಣ್ಣಗಿನ ಗಾಳಿಗಿಂತ ಮೇಲಕ್ಕೇರಲು ಯತ್ನಿಸುತ್ತದೆ. ಈ ಯತ್ನದಲ್ಲಿ ಗಾಳಿಯು, ಮೋಡಗಳನ್ನೂ ಬೇರೆ ಬೇರೆ ಎತ್ತರಕ್ಕೆ ಹರಡಿಸುತ್ತದೆ. ಎಷ್ಟು ಎತ್ತರಕ್ಕೆ ಹರಡುತ್ತದೆ ಎಂಬುದು ವಾತಾವರಣದ ಅಸ್ಥಿರತೆ ತೀವ್ರತೆ ಮೇಲೆ ನಿಂತಂತ ಅಂಶ. ಹಲವು ಜಾತಿಯ ಮೋಡಗಳು ಬೇರೆ ಬೇರೆ ಎತ್ತರದಲ್ಲಿ ನೆಲೆ ಕಂಡ್ಕೊತಾವೆ.

ಮೋಡಗಳು ದಟ್ಟವಾಗಿ ಆಗಸದಿ ಬೆಳೆದ ನಂತರ ಅವುಗಳ ನಡುವಿನ ತಿಕ್ಕಾಟದಿಂದ ಅಣುಗಳ ಬಂಧನವನ್ನು ಕಳಚಿಕೊಂಡು ಹೊರಬಂದ ಎಲೆಕ್ಟ್ರಾನ್ಸ್ ಗಳು ಫ್ರೀ ಚಾರ್ಜಸ್. ಫ್ರೀ ಚಾರ್ಜಸ್ ಯಾವತ್ತಿದ್ರೂ ಅಸ್ಥಿರ. ಅದು ಸೊನ್ನೆ ವೋಲ್ಟೇಜ್ ಉಳ್ಳ ಭೂಮಿ ಕಡೆ ತನ್ನ ಪ್ರಯಾಣ ಆರಂಭಿಸುತ್ತೆ, ನಮಗೆ ಮಿಂಚಾಗಿ ಕಾಣ್ಸುತ್ತೆ. ಕ್ಷಣಗಣನೆಯಲ್ಲಿ ಗುಡುಗು ಕೇಳ್ಸುತ್ತೆ.

ಅಂತೂ ನಾವು ಶುರು ಮಾಡಿದ  ಗುಪ್ತೋಷ್ಣ ಎಂಬ ಕಾನ್ಸೆಪ್ಟ್, ವಾತಾವರಣದಲ್ಲಿ ಉಂಟುಮಾಡೋ ಕೆಲವು ರೋಚಕ ವಿಷಯಗಳ ಕಿರುಪರಿಚಯವನ್ನು ಮೂಡಿಸಿದೆ. ಈ ಕಾನ್ಸೆಪ್ಟ್ ಇಷ್ಟಕ್ಕೇ ಸೀಮಿತಗೊಳ್ಳದೆ, ತಾಂತ್ರಿಕ ಮಟ್ಟದಲ್ಲಿ ಬಹುಪಯೋಗಿ ಆದುದರಿಂದ, ಇದನ್ನ ಅರ್ಥಮಾಡ್ಕೊಂಡ ನಾವೆಲ್ಲಾ ಒಂಥರಾ ಗ್ರೇಟು ಬಿಡ್ರೀ.... :)

ಪರೀಷ್ಕರಿಸಿಕೊಟ್ಟ ವಾಗೀಶ್ ಹೆಗ್ಡೆಯವರಿಗೆ ಧನ್ಯವಾದಗಳು.

          


            

ಮಂಗಳವಾರ, ಮೇ 22, 2012

ರೆಸೋನ್ಯಾನ್ಸ್ -ಪ್ರಕೃತಿ ದನಿಯ ಪರಿಕಂಪನ.


ಸುಮಾರು ಹದಿನೈದು ವರ್ಷಗಳ ಹಿಂದಿನ ನೆನಪು.  ಸಂಜೆ ಹೊತ್ತಲ್ಲಿ ನನ್ನ ಸೈಕಲ್ ನ ಮುಂದೆ ಕೂಳಿಸಿಕೊಂಡು ಟಾರ್ ರೋಡ್ ಆಗಿರೋ ಗುಡ್ಡದ ಮೇಲಿನ ದೇವಸ್ಥಾನಕ್ಕೆ ಮೆಟ್ಟಿಕೊಂಡು ಹೋಗ್ತಿದ್ದ ನನ್ನಣ್ಣ. ಆ ಎತ್ತರಾನ ಏರಿಸ್ಬೇಕಾದ್ರೆ, ರೋಡಿನ ಅಗಲದ ಎರಡೂ ತುದಿಗಳನ್ನ ಮುಟ್ಟುತ್ತಾ,  ಹಾವು ಹರೆದ ಹಾಗೆ ಸೈಕಲ್ ಬಿಡ್ತಿದ್ದ. ನಂಗೆ ಈ ಕೆಲವು ವರ್ಷಗಳ ಈಚೆಗಸ್ಟೇ ಗೊತ್ತಾಗಿದ್ದು ಆ ರೀತಿಯ ಚಲನಕ್ಕೆ ಒಂದು ಹೆಸರಿದೆ, ಅದೇ ಸೈನುಸೋಯ್ಡಲ್ ಮೋಷನ್. ನಮ್ಮ ವೇದದಲ್ಲಿ ಹೇಳಿದ ಜೀವಾ ಎಂಬ ಪದವನ್ನು ಅರಬ್ ಗಣಿತಶಾಸ್ತ್ರಜ್ಞರು ಜೀಬಾ (ಅರ್ಥ: ಕಣಿವೆ) ಎಂದು ಉಚ್ಛರಿಸಿ, ಅದು ಲ್ಯಾಟಿನ್ ಭಾಷೆಯ ಸಮಾನಾರ್ಥಕ  ಸೈನುಸ್  ಆಗಿ, ನಂತರ ಇಂಗ್ಲೀಷಿನವರು ಅದನ್ನ ಸೈನ್ ಅಂತ ಹೇಳಿ ಈಗ ನಮಗೇ ಪಾಠ ಮಾಡ್ತಿರೋದು ಸ್ವಲ್ಪ ಮಟ್ಟಿಗೆ ದುಃಖಕರ ಆದರೂ ಇಲ್ಲಿ ಅದರ ಪ್ರಸ್ತಾವನೆ ಅಷ್ಟು  ಸೂಕ್ತ ಅಲ್ಲ.

ಎತ್ತರ ತೀವ್ರ ಇದ್ದಲ್ಲಿ ಸೈನುಸೋಯ್ಡಲ್ ಚಲನದ ಫ್ರೀಕ್ವೆನ್ಸಿ(ಪುನರಾವರ್ತನೆ) ಹೆಚ್ಚಿಸ್ತಿದ್ದ. ಕಡಿಮೆ ಎತ್ತರಕ್ಕೆ ಫ್ರೀಕ್ವೆನ್ಸಿ ನ ಕಡಿಮೆ ಮಾಡ್ತಿದ್ದ. Hz(ಹರ್ಟ್ಜ್) ಎಂಬುದು ಫ್ರೀಕ್ವೆನ್ಸಿ ಅಳೆಯುವ ಏಕಮಾನವಾಗಿದೆ. ಈ ಸೈನುಸೋಯ್ಡಲ್ ಚಲನೆ ಹಾಗು ಫ್ರೀಕ್ವೆನ್ಸಿ ಎಂಬ ಪದಗಳು ರೆಸೋನ್ಯಾನ್ಸ್(ಪರಿಕಂಪನ) ವಿಷಯವನ್ನು ವಿವರಿಸಲು ಅತಿಮುಖ್ಯವಾದ್ರಿಂದ ಈ ಮೇಲಿನಂತೆ ಅವುಗಳನ್ನ  ಪ್ರಸ್ಥಾಪಿಸಬೇ ಕಾಯ್ತು.

ನನ್ನಮ್ಮನತ್ರ ಒಂದು ಹಳೇ ಹಾರ್ಮೋನಿಯಂ ಪೆಟ್ಟಿಗೆ ಇದೆ. ಅದರ ಕೆಲೋ ಮಣೆ ಒತ್ಕೊಂಡು,  ಸ ರೀ ಗ ಮ ಪ ಹಾಡು ಅಂತ ತಲೆ ತಿಂತಾರೆ. ಹಾಡದಿದ್ರೆ ಅವ್ರಿಗೆ ಬೇಜಾರು. ಹಾಡಿದ್ರೆ ಶ್ರುತಿ ಕೂಡ್ಸಲ್ಲ ನೀನು ಅಂತ ಹೇಳಿ ನಂಗೆ ಬೇಜಾರು ಮಾಡ್ತಾರೆ. ಹೇಗಾದ್ರು ಮಾಡಿ ಶ್ರುತಿ ಅಂದ್ರೆ ಏನು ಅಂತ ತಿಳ್ಕೊಳ್ಳಲ್ಲೇ ಬೇಕು ಅಂತ ಅಂತರಜಾಲದ ಸೆರೆಯಾದ ನಂತರ ಕೆಲೊ ವಿಷಯಗಳು ತಿಳಿಯಲ್ಪಟ್ಟವು. ಶ್ರುತಿ ಎನ್ನೋದು ಶಬ್ದ ತರಂಗಗಳ ಫ್ರೀಕ್ವೆನ್ಸಿ ಅನುಭವ. ಉದಾಹರಣೆಗೆ ಎ ನೋಡ್ ನ ಶಬ್ದ ತರಂಗದ ಫ್ರೀಕ್ವೆನ್ಸಿ 440Hz (1 ಸೆಕೆಂಡ್ ಗೆ 440 ಬಾರಿ ಪುನರಾವರ್ತಿಸುತ್ತದೆ). ನಾನು ಇದಕ್ಕೆ ಶ್ರುತಿ ಕೂಡಿಸಬೇಕಂದ್ರೆ ನನ್ನ ಸ್ವರದ ಮಟ್ಟ 440Hz ನಸ್ಟೇ ಆಗಿರಬೇಕು. ಎರಡು ಒಂದೇ ಶ್ರುತಿ ಕೂಡಿದಾಗ ಅಲ್ಲಿ ಉಂಟಾಗುವ ಮಾಧುರ್ಯದ ಅನುಭವಕ್ಕೆ ಕಾರಣ ರೆಸೋನ್ಯಾನ್ಸ್.


ಕಾರಣ ಏನೋ, ರೆಸೋನ್ಯಾನ್ಸ್ ಅಂತ ಗೊತ್ತಾಯ್ತು. ಆದ್ರೆ ರೆಸೋನ್ಯಾನ್ಸ್ ಅಂದ್ರೆ ಏನು ಅಂತ ಅರ್ಥ ಮಾಡ್ಕೋಬೇಕಲ್ಲ! ಅದಿಕ್ಕೆ ಒಬ್ರು ಪ್ರೊಫೆಸರ್ ಹತ್ರ ಹೋಗಿ ರೆಸೋನ್ಯಾನ್ಸ್ ವಿವರಿಸುವಂತೆ ಕೇಳಿದೆ.ಅವ್ರು ತಮ್ಮ ಜಾಗದಿಂದ ಎದ್ದು,ಮೂಲೆಯಲ್ಲಿ ಬಿದ್ದಿದ್ದ ಕೊಲೊಂದನ್ನು ನನ್ನ ಕೈಗೆ ಕೊಟ್ರು. (ಚಿತ್ರ-೧ ನ್ನ ನೋಡಿ) ನಾ ಕೆಳಿದ್ದಕ್ಕೊಂದೂ ಉತ್ತರ ಕೊಡದೆ,ಅವರು ಮತ್ತಷ್ಟು ಹುಡುಕಾಟ ಮುಂದುವರಿಸಿದ್ರು.
ಚಿತ್ರ-೧
 ನಾನು ಪ್ರಶ್ನಿಸೋದನ್ನ ಬಿಟ್ಟು ಅವ್ರು ಹೇಳಿದಷ್ಟನ್ನ ಮಾಡ್ತಾ ಹೋದೆ. ಕೋಲಿನ ಮಧ್ಯಕ್ಕೆ ಕಟ್ಟುವಂತೆ ಸೂಚಿಸಿ ಹಗ್ಗವೊಂದನ್ನ ಕೊಟ್ರು. ಹಗ್ಗದ ಇನ್ನೊಂದು ಕೊನೆಗೆ ಗುಂಡು ಕಲ್ಲೊಂದ ಅವ್ರೆ ಕಟ್ಟಿದ್ರು.ನಾನು ನನ್ನ ಎರಡೂ ಕೈಗಳಿಂದ ಕೋಲಿನ ಎರಡು ಕೊನೆಗಳನ್ನ ಹಿಡ್ಕೊಂಡಿದೀನಿ. ಅದರ ಮಧ್ಯದ ಹಗ್ಗದಿಂದ ನೇತಾಡುತ್ತಿರುವ ಗುಂಡು ಕಲ್ಲನ್ನು ಅವ್ರು ಹಂದಾಡಿಸಿ ಅವ್ರ ಸೀಟ್ ಗೆ ಹೋಗಿ ಕೂತ್ರು. ಪರಿಸ್ಥಿತಿಯಲ್ಲಿ, ಕಲ್ಲಿನ ಚಲನ ಸೈನುಸೋಯ್ದಲ್ ಅಥವಾ ಸಿಂಪಲ್ ಹಾರ್ಮೋನಿಕ್ ಮೋಶನ್ ಅನ್ನೋದು ಮಾತ್ರ ನಂಗೆ ಗೊತ್ತು.ಅಂದ ಹಾಗೆ  ಸಿಂಪಲ್ ಹಾರ್ಮೋನಿಕ್ ಮೋಶನ್ ಅಂದ್ರೆ ನಿರ್ದಿಷ್ಟ  ಫ್ರೀಕ್ವೆನ್ಸಿ ಸೈನುಸೋಯ್ದಲ್ ಚಲನ ಎಂದರ್ಥ.ಅದರಲ್ಲೇನೂ ಹೊಸತಿಲ್ಲ.ಅವರ ಸೀಟ್ ನಿಂದಾನೆ ಮುಂದಿನ ಆದೇಶಗಳನ್ನ ಹೊರಡಿಸ್ತಾ ಹೋದ್ರು. ಆ ಕೋಲನ್ನೇ ಅಕ್ಷರೇಖೆ (ಆಕ್ಸಿಸ್)ಯಾಗಿಟ್ಟುಕೊಂಡು, ಕೋಲನ್ನು ಜೋರಾಗಿ ಅಂದ್ರೆ ಜಾಸ್ತಿ ಫ್ರೀಕ್ವೆನ್ಸಿಯೊಂದಿಗೆ ತಿರುಗಿಸುವಂತೆ ಹೇಳಿದ್ರು.ಆದೇಶಾನ ಕಾರ್ಯರೂಪಕ್ಕೆ ತರ್ತಿದ್ದಂಗೆ,ಕಲ್ಲಿನ ಸಿಂಪಲ್ ಹಾರ್ಮೋನಿಕ್ ಮೋಶನ್ ತೀವ್ರತೆ (ಇಂಟೆನ್ಸಿಟಿ) ಕಡಿಮೆ ಆಗ್ತಾ ನಿಂತು ಹೋಯ್ತು.ಕೋಲನ್ನು ಬಲು ಹಗುರವಾಗಿ ಅಂದ್ರೆ ಸಣ್ಣ  ಫ್ರೀಕ್ವೆನ್ಸಿಯೊಂದಿಗೆ ತಿರುಗಿಸುವಂತೆ ಹೇಳಿದ್ರು.ಆಗಲೂ ಸಹ ಕಲ್ಲಿನ ಚಲನ ನಿಂತು ಹೋಯ್ತು. ಬಾರಿ ಕಲ್ಲನ್ನು ಹಂದಾಡಿಸಿ, ಕಲ್ಲಿನ ಫ್ರೀಕ್ವೆನ್ಸಿ ಲ್ಲೇ ಕೋಲನ್ನು ತಿಪ್ಪುವಂತೆ ಹೇಳಿದ್ರು. ಬಲು ಅಚ್ಚರಿಯ ಸಂಗತಿಯೆಂದರೆ,  ನಿರ್ದಿಷ್ಟ  ಫ್ರೀಕ್ವೆನ್ಸಿಯಲ್ಲಿ ಚಲನದ ತೀವ್ರತೆ ಹೆಚ್ಚುತ್ತಾ ಹೋಯ್ತು.ನನ್ನ ಮುಖದಲ್ಲಿನ ಅಚ್ಚರಿ ನೋಡಿ ನಮ್ಮ ಪ್ರೊಫೆಸರ್,ದಾಟ್ಸ್ ರೆಸೋನ್ಯಾನ್ಸ್ ಅಂತ ಹೇಳಿ ಕೋಲನ್ನ ಕಸ್ಕೊಂಡು ನನ್ನ ಹೊರಗಟ್ಟಿದ್ರು.ಆದಿನ ನಂಗೆ ಪರಿಕಂಪನ ಅಂದ್ರೆ ಏನು ಅಂತ ಅರ್ಥ ಆಗಿದ್ದು ನೋಡ್ರಿ.

ಪರಿಕಂಪನ ಎಂಬ ಸಂಗತಿಯನ್ನು ಪ್ರಕೃತಿಯು ಅಡಗಿಸಿಕೊಂಡು,ನಮಗೆ ತೋರುತ್ತಿರೋ ಚಮತ್ಕಾರದ ಆಟವು ಭೌತಶಾಶ್ತ್ರದ ಕಲಿಕೆಯಲ್ಲಿ ಅತಿದೊಡ್ಡ ವಿಭಾಗವನ್ನೇ ಸೃಷ್ಟಿಸಿದೆ.ರೆಸೋನ್ಯಾನ್ಸ್ ನ ಪರಿಣಾಮವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.
                                         ರಚನಾತ್ಮಕ  ಪರಿಕಂಪನ  (ಕಂಷ್ಟ್ರುಕ್ಟಿವ್ ರೆಸೋನ್ಯಾನ್ಸ್   )
                                         ವಿಧ್ವಂಸಕ  ಪರಿಕಂಪನ         ( ಡಿಷ್ಟ್ರಕ್ಟಿವ್ ರೆಸೋನ್ಯಾನ್ಸ್     )

ಈ ಲೇಖನಾನ ಅರ್ಧಕ್ಕೆ ಬರೆದು, ಮಕ್ಕಳ ಕೂಟ ಪಾರ್ಕ್ ಗೆ ಹೋಗಿದ್ದೆ. ಮಕ್ಕಳ ಮುಗ್ಧ ಆಟೋಪಟಳಗಳಿಗೆ ಯಾರ ಮನಸ್ಸು ಪರಿಕಂಪಿಸದೆ ಇರೋಕೆ ಸಾಧ್ಯ ಹೇಳಿ! ಅಲ್ಲಿ ಕೆಲವು ಮಕ್ಕಳನ್ನು ಜೋಕಾಲಿಯಲ್ಲಿ ಕುಳಿಸಿ ತೂಗುತ್ತಿದ್ರು ಅವರ ಅಮ್ಮ,ಅಪ್ಪ.ಅವ್ರು ಜೋಕಾಲಿಯನ್ನು ತಳ್ಳುತ್ತಿರೋ  ಫ್ರೀಕ್ವೆನ್ಸಿ  ಮತ್ತು ಜೋಕಾಲಿಯು ತೂಗುತ್ತಿರೋ ಫ್ರೀಕ್ವೆನ್ಸಿ ಎರಡೂ ಒಂದೇ.  ಅಲ್ಲಿ ರೆಸೋನ್ಯಾನ್ಸ್  ನಂಗೆ ಕಾಣಿಸ್ತಿತ್ತು.ಆ ಜೋಕಾಲಿ ತೂಗೋ ತೀವ್ರತೆ ಜಾಸ್ತಿ ಆಗುತ್ತಲೇ ಇತ್ತು.ಜಾಸ್ತಿಯಾಗಿ ಜೋಕಾಲಿ ಮಕ್ಕಳನ್ನ ಉರುಳಿಸಿಬಿಟ್ಟರೆ ಎನ್ನೋ ಭಯದೊಂದಿಗೆ ಅದರ ಹತ್ತಿರ ಎದ್ದು ನಡೆದೆ.ಆಮೇಲೆ ನಾನು ನನ್ನ ಧನ್ಯವಾದಗಳನ್ನು ತಿಳಿಸಿದ್ದು ಗಾಳಿಯಲ್ಲಿನ ಘರ್ಷಣೆಗೆ. ಗಾಳಿಯಲ್ಲಿನ ಘರ್ಷಣೆ ಉಯ್ಯಾಲೆಯ ತೀವ್ರತೆಯನ್ನು ಒಂದು ಮಟ್ಟಕ್ಕಿಂತ ಮೇಲೆ ಹೋಗದಂತೆ ತಡೆದಿತ್ತು.ಓಹ್ ರಚನಾತ್ಮಕ ಪರಿಕಂಪನಕ್ಕೊಂದು ಉದಾಹರಣೆ ಸಿಗ್ತು. ಅಂದರೆ ಕನ್ಸ್ಟ್ರಕ್ಟಿವ್ ರೆಸೋನ್ಯಾನ್ಸ್ ಗೆ ಯಾವುದಾದರೊಂದು ವಿರೋಧಿಸೋ ಘರ್ಷಣೆ ಇರಲೇಬೇಕು ಎಂದಾಯ್ತು. ಕೆಲಸ ಅರ್ಧಕ್ಕೆ ಬಿಟ್ಟು ಪಾರ್ಕ್ ಗೆ ಬಂದಿದ್ದಕ್ಕೂ ಸಾರ್ಥಕ ಆಯ್ತು.

ಕೆಲವು ಒಪೇರಾ ಸಿಂಗರ್ಸ್ ಗಾಜಿನ ಲೋಟವನ್ನು ತಟ್ಟಿ ಅದರ ಸ್ವಾಭಾವಿಕ ಫ್ರೀಕ್ವೆನ್ಸಿ ಕಂಡು ಹಿಡಿದು ಶ್ರುತಿಯಲ್ಲೇ ಹಾಡಿ,ಆ ಲೋಟವನ್ನೇ ಒಡಿತಾರಂತೆ.ನೋಡಿ ಜನ ಸಾಧನೆ ಹಾದಿಯಲ್ಲಿ ಏನೇನ್ ಮಾಡ್ತಾರೆ ಅಂತ.ಹ್ಹ ಹ್ಹ.ಆ ಲೋಟಾನ ಬಚಾವು ಮಾಡೋಕೆ ಯಾವ ಘರ್ಷಣೆಯೂ ಬರ್ಲಿಲ್ಲ ಆದ್ರಿಂದ ಲೋಟ ಒಡಿತು. ಇದು ವಿಧ್ವಂಸಕ ಪರಿಕಂಪನ. ತೂಗು ಸೇತುವೆ ಕಟ್ಟೋ ಇಂಜಿನಿಯರ್ಸ್ ರೆಸೋನ್ಯಾನ್ಸ್ ಬಗ್ಗೆ ತಲೆ ಕೆಡಿಸ್ಕೊಂಡಷ್ಟಕ್ಕೂ ಸಾಲದು.ಸೇತುವೆ ಮೇಲೆ ಹಾಸೋ ಕಾಂಕ್ರೀಟ್ ಮೇಲ್ಮೈ,ತಟ್ಟೆ ಮೇಲೆ ಗಟ್ಟಿ ಮೊಸರು ಅತಿ  ಚಿಕ್ಕ ಫ್ರೀಕ್ವೆನ್ಸಿನಲ್ಲಿ ಹಂದಾಡಿದ ಹಾಗೆ  ಹಂದಾಡ್ತಿರುತ್ತೆ.ತುಂಬಾ ಚಿಕ್ಕ ಪ್ರಮಾಣದಲ್ಲಿ ಭೂಕಂಪನಗೊಂಡಾಗ ಅತಿ ಚಿಕ್ಕ ಫ್ರೀಕ್ವೆನ್ಸಿ(1Hz-3Hz) ಯ ವೈಬ್ರೇಶನ್ಸ್ ಇರ್ತವೆ.ಅದು ಬ್ರಿಡ್ಜ್ ಕಾಂಕ್ರೀಟ್ ಫ್ರೀಕ್ವೆನ್ಸಿಗೆ ಸರಿ ಹೊಂದಿ, ಬ್ರಿಡ್ಜ್ ಅನ್ನೇ ಕೆಡವಬಹುದು. 1989ರಲ್ಲಿ ಕ್ಯಾಲಿಫೋರ್ನಿಯಾದ ನಿಮಿಟ್ಸ್ ಫ್ರೀವೆ ಕುಸಿದಿರೋದು ಇದೇ ಕಾರಣದಿಂದ ಎಂದು ದಾಖಲಾತಿ ಮಾಡಲಾಗಿದೆ. ಭೂಕಂಪ ಬಿಡಿ, ಬರೀ ಗಾಳಿಯ ಸುಳಿಗೇ ತೂಗು ಸೇತುವೆ ಕುಸಿದು ಬಿದ್ದಿರೋ ಘಟನೆಗೆ ಸಾಕ್ಷಿ ವಾಶಿಂಗ್ಟನ್ ನ ಟಕೋಮ ನ್ಯಾರೋ ಬ್ರಿಡ್ಜ್ ಕೊಲ್ಯಾಪ್ಸ್.  ಹರಿಯೋ ನೀರಿನಲ್ಲಿ ಸುಳಿ ಹುಟ್ಟಬೇಕಾದರೆ ತಳದಲ್ಲಿ ಯಾವುದಾದರೂ ದಿಢೀರ್ ಡಿಸ್ಟರ್ಬೆನ್ಸ್ ಇರಬೇಕು.ಇಲ್ಲಿ ಬೀಸುತ್ತಿರೋ ಗಾಳಿಗೆ ಡಿಸ್ಟರ್ಬೆನ್ಸ್ ಆಗಿದ್ದು  ಬ್ರಿಡ್ಜ್.ಗಾಳಿಯಲ್ಲಿ ಸುಳಿ ಹುಟ್ಟಿಕೊಂಡು,  ಗಾಳಿಯ ವೇಗ ಈ ಬ್ರಿಡ್ಜ್ ನ ಸ್ವಾಭಾವಿಕ ಫ್ರೀಕ್ವೆನ್ಸಿಗೆ ಸರಿ ಹೊಂದಿ, ಬ್ರಿಡ್ಜ್ ಅನ್ನೇ ನುಂಗಿಬಿಟ್ಟದ್ದು ಇತಿಹಾಸದ ಪುಟ ಸೇರಿವೆ. ನಾನು ಪುಟಗಳನ್ನು ಓದಿನೇ ಇಲ್ಲಿ ಗೀಚಿರೋದು.ಡಿಷ್ಟ್ರಕ್ಟಿವ್ ರೆಸೋನ್ಯಾನ್ಸ್  ಈ ಮೆಲಿನವಕ್ಕಿಂತ ಸ್ಟ್ರಾಂಗ್ ಉದಾಹರಣೆಗಳು ಬೇಕೇ!

ಈ ಪುಟ್ಟ ಲೇಖನವನ್ನು ಮುಗಿಸೋ ಮುನ್ನ ಒಂದು ಕೊನೆಯ ಟಾಪಿಕ್ ಬಗ್ಗೆ ಹೇಳೋಕೆ ಇಷ್ಟಪಡ್ತೀನಿ. ಎಂ ಆರ್ ಸ್ಕಾನಿಂಗ್ ಬಗ್ಗೆ.ಇದನ್ನ ಒಂದು ವಸ್ತುವಿನ ಅಣುಗಳ ಆಯಕಟ್ಟು (ಮೊಲಿಕ್ಯುಲರ್ ಸ್ಟ್ರಕ್ಚರ್) ಹಾಗು ರೋಗಿಯ ದೇಹದೊಳಗಿನ ವೈದ್ಯಕೀಯ ಸಂಬಂಧದ ಚಿತ್ರಗಳನ್ನು ತೆಗೆಯಲು ಬಳಸ್ತಾರೆ. ಇದರ ನಿಜವಾದ ಹೆಸರು ನ್ಯೂಕ್ಲಿಯಾರ್ ಮ್ಯಾಗ್ನೆಟಿಕ್  ರೆಸೋನ್ಯಾನ್ಸ್ ಇಮೇಜಿಂಗ್.ಜನರು ನ್ಯೂಕ್ಲಿಯಾರ್ ಅನ್ನೋ ಪದಕ್ಕೆ ಹೆದರಿ ಸ್ಕ್ಯಾನಿಂಗ್ ಮಾಡಿಸ್ಕೊಳ್ಳದಿದ್ರೆ ಅಂತ ಯೋಚಿಸಿ ಎಂ ಆರ್ ಐ ಎಂದು ಹೆಸರಿಟ್ಟಿದ್ದಾರೆ ಅನ್ಸುತ್ತೆ.ಇನ್ನು ಇದು ಹೇಗೆ ಕೆಲಸ ಮಾಡತ್ತೆ ಎಂದು ನೋಡೋಣ.

ನಮ್ಮ ದೇಹದಲ್ಲಿ ಹೈಡ್ರೋಜೆನ್ ಅಣುಗಳು ಬೇರೆ ಬೇರೆ ರೂಪದಲ್ಲಿ ಹೇರಳವಾಗಿರುತ್ತೆ. ಇದರೊಳಗಿನ ಬೀಜಾಣು (ನ್ಯೂಕ್ಲಿಯಸ್) ಅದರ ಜಾಗದಲ್ಲೇ ಗಿರ್ರನೆ ಸುತ್ತುತ್ತಿರುತ್ತದೆ, ಅಂದರೆ ಅದರದ್ದೇ ಆದ ನಿರ್ದಿಷ್ಟ ಫ್ರೀಕ್ವೆನ್ಸಿಯ ಸ್ಪಿನ್ ಹೊಂದಿರುತ್ತದೆ. ಅಭೀಕ್ಷಣ(ಸ್ಕ್ಯಾನಿಂಗ್) ಪ್ರಕ್ರಿಯೆಯಲ್ಲಿ,ಹೊರಗಿನಿಂದ ಸ್ಕ್ಯಾನಿಂಗ್ ಮೆಶೀನ್ ಹಲವು ಫ್ರೀಕ್ವೆನ್ಸಿಯಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್(ಇಎಂಕಿರಣಗಳನ್ನು ಕಳಿಸ್ತಿರುತ್ತೆ. ಯಾವಾಗ ಹೊರಗಿನಿಂದ ಬಂದ ಕಿರಣಗಳ ಫ್ರೀಕ್ವೆನ್ಸಿ ನಮ್ಮ ಬೀಜಾಣುವಿನ ಸ್ಪಿನ್ ಫ್ರೀಕ್ವೆನ್ಸಿ ಜೊತೆ ಸರಿಹೊಂದುತ್ತೋ, ಆಗ ಅದರ ಸ್ಪಿನ್ ನ ತೀವ್ರತೆ ಹೆಚ್ಚುತ್ತದೆ.ಅಣುವಿನ ಒಳಗೆ ಯಾವುದೇ ಘರ್ಷಣೆ ಇಲ್ಲದ್ದರಿಂದ, ಇದು ಶಕ್ತಿಯನ್ನು ಇಎಂ ಕಿರಗಳ ರೂಪದಲ್ಲೇ ಹೊರಸೂಸುತ್ತದೆ. ಹೀಗೆ ಬೀಜಾಣುವಿನ ರೆಸೋನ್ಯಾನ್ಸ್ ರೂಪಿಕೆ(ಪ್ಯಾಟರ್ನ್) ಅನ್ನು  ಪರಿಶೀಲಿಸಿ, ಅದರಿಂದ ವೈದ್ಯಕೀಯ ನಿರ್ಧಾರಗಳನ್ನು ತೆಗೆದ್ಕೊಳ್ತಾರೆ.
ರೆಸೋನ್ಯಾನ್ಸ್ ಎಂಬ ಸಮುದ್ರದಲ್ಲಿ ನಾ ಹಿಡಿದಿಟ್ಟ ಒಂದು ಲೋಟದಷ್ಟು ವಿಷಯವನ್ನು ಲೇಖನ ರೂಪದಲ್ಲಿ ಬರೆದಿದ್ದೇನೆ.ಒಂದೇ ವಾಕ್ಯದಲ್ಲಿ ಹೇಳಿ ಮುಗಿಸ್ಬೇಕಂದ್ರೆ ಈ ಪ್ರಕೃತಿಯಲ್ಲಿನ ಎಲ್ಲಾ ಆಗು ಹೋಗುಗಳಿಗೆ ಪ್ರಕೃತಿಯೇ ಪರಿಕಂಪಿಸಿ ನಮಗೆ ಉತ್ತರವನ್ನು ನೀಡುತ್ತದೆ. hಹಾಂ ನಾವು ಹುಡ್ಗೀರ್ಗೆ ಕಣ್ಣು ಹೊಡೆದಾಗ ಅವ್ರಿಂದ ಸಿಗೋ ಪ್ರತಿಕ್ರಿಯೆಗೆ ಅವರ ಮನಸ್ಸಿನಲ್ಲಿನ ರೆಸೋನ್ಯಾನ್ಸ್ ಏ ಹೊಣೆ. ಒಂದು ವೇಳೆ ಆ ಮನಸ್ಸಿನ ರೆಸೋನ್ಯಾನ್ಸ್ ಗೆ ಪ್ರೀತಿಯ ಘರ್ಷಣೆ ಉಂಟಾದರೆ ಕಂಷ್ಟ್ರುಕ್ಟಿವ್ ರೆಸೋನ್ಯಾನ್ಸ್. ಪ್ರೀತಿ ಇಲ್ಲಾಂದ್ರೆ   ಡಿಷ್ಟ್ರಕ್ಟಿವ್ ರೆಸೋನ್ಯಾನ್ಸ್ . ಯಾವ್ದಕ್ಕೂ ಈ ರೆಸೋನ್ಯಾನ್ಸ್ ಬಗ್ಗೆ ಸ್ವಲ್ಪ ಹುಷಾರಾಗಿರಬೇಕು ನಾವು... J h


 ಚಿತ್ರ ಬಿಡಿಸಿ ಕೊಟ್ಟ ರಮ್ಯ ಆರ್ ಅವರಿಗೆ ಧನ್ಯವಾದಗಳು .